ಶ್ರೀ ಕಾಗಿನೆಲೆ ಮಹಾಸಂಸ್ಥಾನ – ಆಧ್ಯಾತ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಸಮಾಜ ಸೇವೆಯ ಅಕ್ಷಯ ಕೇಂದ್ರ
ಸರ್ವೇ ಜನಾಃ ಸುಖಿನೋ ಭವಂತು – ಎಲ್ಲರೂ ಸುಖಿಗಳಾಗಿರಲಿ
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಶ್ರೀಕನಕಗುರುಪೀಠವು ಕರ್ನಾಟಕದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ನೆಲೆಗೊಂಡಿರುವ ಐತಿಹಾಸಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಈ ಪೀಠವು ಕುರುಬ ಸಮಾಜದ ಆಧ್ಯಾತ್ಮಿಕ ನೇತೃತ್ವವನ್ನು ವಹಿಸಿಕೊಂಡು, ಶ್ರೀ ಭಕ್ತ ಕನಕದಾಸರ ಆದರ್ಶಗಳನ್ನು ಜೀವಂತವಾಗಿಟ್ಟುಕೊಂಡು ಸಮಾಜದ ಉದ್ಧಾರಕ್ಕಾಗಿ ಅನವರತವಾಗಿ ಶ್ರಮಿಸುತ್ತಿದೆ.
ಶ್ರೀಕನಕಗುರುಪೀಠವು ಕೇವಲ ಧಾರ್ಮಿಕ ಕ್ಷೇತ್ರವಾಗಿರದೆ, ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಪುನರುಜ್ಜೀವನ, ಸಮಾಜ ಸುಧಾರಣೆ ಮತ್ತು ಆಧ್ಯಾತ್ಮಿಕ ಜಾಗೃತಿಗಳ ಅಪೂರ್ವ ಸಮ್ಮಿಲನವಾಗಿದೆ. ಇಲ್ಲಿನ ಪೀಠಾಧ್ಯಕ್ಷರುಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ಸಮಾನವಾಗಿ ಸ್ಪಂದಿಸುತ್ತಾ, “ಎಲ್ಲರೂ ಬಾಳೋಣ ಸೇರಿ ಸಾಗೋಣ” ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟಿದ್ದಾರೆ.
ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಸಮತೆಯನ್ನು ಸಾಧಿಸುವುದು. ಶ್ರೀ ಭಕ್ತ ಕನಕದಾಸರು ಕಂಡ “ಸಮ ಸಮಾಜ”ದ ನಿರ್ಮಾಣ.
ಹಿಂದುಳಿದ, ದಲಿತ, ಶೋಷಿತ ಸಮುದಾಯಗಳಿಗೆ ಅನ್ನ, ಅಕ್ಷರ, ಆರೋಗ್ಯ ಮತ್ತು ಆಶ್ರಯವನ್ನು ಒದಗಿಸುವುದು. ಆಧ್ಯಾತ್ಮಿಕ ಜ್ಞಾನದ ಬೆಳಕನ್ನು ಎಲ್ಲಾ ಕಡೆಗೂ ಹರಡುವುದು.
ಸತ್ಯ, ಶಾಂತಿ, ಅಹಿಂಸೆ, ಸೇವೆ, ಸಹೃದಯತೆ, ಸಾಮರಸ್ಯ – ಇವು ನಮ್ಮ ಮೂಲಾಧಾರ. ಯಾವುದೇ ಭೇದಭಾವವಿಲ್ಲದೆ ಎಲ್ಲಾ ಧರ್ಮ, ಜಾತಿ, ಪಂಗಡಗಳನ್ನು ಸಮಾನವಾಗಿ ಪ್ರೀತಿಸುವುದು.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠವು ಹಾಲುಮತ (ಕುರುಬ) ಸಮಾಜದ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಪೀಠವು ಕುಲಗುರು ಶ್ರೀ ರೇವಣಸಿದ್ದೇಶ್ವರ ಮತ್ತು ಕುಲದೈವ ಶ್ರೀ ಬೀರಲಿಂಗೇಶ್ವರರ ಆಶೀರ್ವಾದದೊಂದಿಗೆ ಸ್ಥಾಪಿತವಾಯಿತು. ಶ್ರೀ ಭಕ್ತ ಕನಕದಾಸರು ಈ ನಾಡಿನ ಮಹಾನ್ ದಾಸ ಶ್ರೇಷ್ಠರಾಗಿದ್ದು, ಅವರ ಕರ್ಮಭೂಮಿಯೇ ಕಾಗಿನೆಲೆ.
ಪ್ರಥಮ ಜಗದ್ಗುರುಗಳಾದ ಶ್ರೀಶ್ರೀಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳು ಈ ಪೀಠವನ್ನು ಸ್ಥಾಪಿಸಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ಇಂದು ದ್ವಿತೀಯ ಜಗದ್ಗುರುಗಳಾದ ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಈ ಪೀಠದ ಅಧ್ಯಕ್ಷರಾಗಿ, ತಮ್ಮ ಕಾಯಕ ತಪಸ್ಸಿನ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಡಿ.ಇ.ಡಿ., ಸಂಸ್ಕೃತ ಪಾಠಶಾಲೆ – 2,000+ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಸತಿ.
ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ನಿತ್ಯಾನ್ನ ದಾಸೋಹ. ಪ್ರತಿದಿನ ಸಾವಿರಾರು ಭಕ್ತಾದಿಗಳಿಗೆ ಉಚಿತ ಪ್ರಸಾದ.
ಸಂಚಾರಿ ಕುರಿಗಾಹಿಗಳ ಮಕ್ಕಳಿಗೆ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳು, ಶ್ರೀ ಮಾಳಿಂಗರಾಯ ವಸತಿ ನಿಲಯ.
ಅಹಿಂದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸರ್ಕಾರದ ಗಮನ ಸೆಳೆಯುವುದು ಮತ್ತು ಅನುದಾನ ಕೊಡಿಸುವುದು.
ಕನಕ ಜಯಂತೋತ್ಸವ, ರಥೋತ್ಸವ, ಪ್ರವಚನ, ಜಾನಪದ ಸ್ಪರ್ಧೆಗಳು – ಸಂಸ್ಕೃತಿ ಜೀವಂತವಾಗಿಡಲು.
ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ, ಸಮಾಜದ ಮುಖಂಡರೊಂದಿಗೆ ಸಾಮರಸ್ಯ ಮತ್ತು ಸಂಘಟನೆ.
ಪ್ರಸ್ತುತ ಪೀಠಾಧ್ಯಕ್ಷರಾಗಿರುವ ಜಗದ್ಗುರು ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಅವರು ತಮ್ಮ ಕಾಯಕ ತಪಸ್ಸು, ಪ್ರಜ್ಞಾವಂತ ನಡೆ-ನುಡಿಗಳಿಂದ ಸಮಾಜದಲ್ಲಿ ಅಪಾರ ಪ್ರೀತಿ ಮತ್ತು ಗೌರವವನ್ನು ಗಳಿಸಿದ್ದಾರೆ. ಅವರು “ದಣಿವರಿಯದ ಕಾಯಕಯೋಗಿ” ಎಂದೇ ಖ್ಯಾತರಾಗಿದ್ದಾರೆ.
ಇವರ ನೇತೃತ್ವದಲ್ಲಿ ಶ್ರೀಮಠವು ಅಪಾರ ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ ಸೇವೆಗಳನ್ನು ಮಾಡುತ್ತಿದೆ. ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಧ್ವನಿಯಾಗಿ, ಅವರ ಮನವಿಗಳನ್ನು ಸರ್ಕಾರದ ಮುಂದಿಡುವಲ್ಲಿ ಜಗದ್ಗುರುಗಳು ಮಹತ್ತರ ಪಾತ್ರವಹಿಸಿದ್ದಾರೆ.
ಶ್ರೀಗಳು ಸಂಸ್ಕೃತ, ಹಿಂದಿ, ಕನ್ನಡ, ತಮಿಳು, ತೆಲುಗು, ನೇಪಾಳಿ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದು, ವೇದ, ಆಗಮನ, ಶಾಸ್ತ್ರಗಳ ಆಳವಾದ ಅಧ್ಯಯನ ಮಾಡಿದ್ದಾರೆ. ಮೌಢ್ಯತೆ, ಅಂಧಶ್ರದ್ಧೆ, ಅನಿಷ್ಟ ಪದ್ಧತಿಗಳನ್ನು ಅವರು ಪ್ರಖರವಾಗಿ ವಿರೋಧಿಸುತ್ತಾರೆ.
ಶ್ರೀಕನಕಗುರುಪೀಠವು ಕುರುಬ ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಸಂಕೇತಗಳಾದ ಡೊಳ್ಳು, ಭಂಡಾರ, ವಿಭೂತಿ, ಜೋಳಿಗೆ, ಬೆತ್ತ, ಕಂಬಳಿ ಮುಂತಾದವುಗಳ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯವನ್ನು ಮಾಡುತ್ತಿದೆ. ಪ್ರತಿ ವರ್ಷ ಶ್ರೀ ಕನಕ ಜಯಂತೋತ್ಸವ, ಶ್ರೀ ಕನಕ – ಕೇಶವ ರಥೋತ್ಸವ, ಮತ್ತು ವಿವಿಧ ದೈವಗಳ ವಾರ್ಷಿಕೋತ್ಸವಗಳನ್ನು ವೈಭವದಿಂದ ಆಚರಿಸಲಾಗುತ್ತದೆ.
ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ಶ್ರೀ ವಿಘ್ನೇಶ್ವರ, ಶ್ರೀ ರೇವಣಸಿದ್ದೇಶ್ವರ, ಶ್ರೀ ಬೀರಲಿಂಗೇಶ್ವರ, ಶ್ರೀ ಮೈಲಾರಲಿಂಗೇಶ್ವರ, ಶ್ರೀ ಆಂಜನೇಯಸ್ವಾಮಿ – ಎಲ್ಲಾ ದೇವರುಗಳನ್ನು ಒಂದೇ ದೇವಾಲಯದಲ್ಲಿ ಪ್ರತಿಷ್ಠಾಪಿಸಿ, ಅಂಧತ್ವವನ್ನು ಹೋಗಲಾಡಿಸಿ ಏಕೀಕೃತ ಆರಾಧನಾ ಪದ್ಧತಿಗೆ ಚಾಲನೆ ನೀಡಲಾಗಿದೆ.
ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ 75%ರಷ್ಟು ಮುಸ್ಲಿಂ ಬಾಂಧವರು ವಾಸಿಸುತ್ತಿದ್ದು, ಅವರು ಸಹ ಶ್ರೀಮಠದ ಅಭಿಮಾನಿ ಭಕ್ತರಾಗಿದ್ದಾರೆ. ಜಗದ್ಗುರುಗಳು ಎಲ್ಲಾ ಧರ್ಮಗಳ ಹಬ್ಬಗಳಿಗೆ ತುಂಬು ಹೃದಯದಿಂದ ಶುಭಾಶಯಗಳನ್ನು ಸಲ್ಲಿಸುತ್ತಾರೆ. ಮುಸ್ಲಿಂ ಸಮುದಾಯದ ಪ್ರಾರ್ಥನಾ ಸ್ಥಳಕ್ಕೆ ಸರ್ಕಾರದಿಂದ ಸುಮಾರು ₹20 ಲಕ್ಷ ಅನುದಾನ ಕೊಡಿಸುವಲ್ಲಿ ಜಗದ್ಗುರುಗಳ ಪಾತ್ರ ಅನನ್ಯವಾಗಿದೆ.
“ಸರ್ವೇ ಜನಾಃ ಸುಖಿನೋ ಭವಂತು” – ಎಲ್ಲಾ ಜನರು ಸುಖಿಗಳಾಗಿರಲಿ ಎಂಬ ಸಂದೇಶವನ್ನು ಜಗದ್ಗುರುಗಳು ತಮ್ಮ ಪ್ರತಿಯೊಂದು ಪ್ರವಚನ, ಭಾಷಣ, ಮತ್ತು ಕಾರ್ಯದಲ್ಲಿ ಎತ್ತಿಹಿಡಿಯುತ್ತಾರೆ.
ಕರ್ನಾಟಕ ಸರ್ಕಾರವು ಕಾಗಿನೆಲೆಯಲ್ಲಿ “ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ”ವನ್ನು ರಚಿಸಿದ್ದು, ಜಗದ್ಗುರುಗಳು ಈ ಪ್ರಾಧಿಕಾರದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ ಭಕ್ತ ಕನಕದಾಸರ ಜನ್ಮಭೂಮಿ ಮತ್ತು ಕರ್ಮಭೂಮಿಗಳ ಅಭಿವೃದ್ಧಿಗಾಗಿ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಲು ಪ್ರಾಧಿಕಾರಕ್ಕೆ ಮಾರ್ಗದರ್ಶನ ನೀಡಲಾಗುತ್ತಿದೆ.
ಕನಕದಾಸರ ದೇವಾಲಯಗಳು, ಗ್ರಂಥಾಲಯಗಳು, ಸಭಾಭವನ, ಮುಖ್ಯದ್ವಾರ, ಪುತ್ಥಳಿಗಳಿರುವ ವೃತ್ತಗಳು, ಉದ್ಯಾನವನ, ಸಂಗೀತ ಕಾರಂಜಿ, ಹುಟ್ಟೂರು ಬಾಡದಲ್ಲಿನ ಕನಕದಾಸರ ಅರಮನೆ, ಕನಕದಾಸರ ಗದ್ದುಗೆ – ಇವುಗಳ ಸಂರಕ್ಷಣೆಗೆ ಜಗದ್ಗುರುಗಳು ವಿಶೇಷ ಗಮನವನ್ನು ಹರಿಸಿದ್ದಾರೆ.